ಸುಳ್ಯ: ಭಾರಿ ಕುತೂಹಲ ಕೆರಳಿಸಿದ್ದ ಸಂಪಾಜೆಯ ಚಟ್ಟೆಕಲ್ಲಿನಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊನೆಗೂ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ವತಃ ಈ ವಿಷಯವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಾವಣೆ ಋಷಿಕೇಶ್ ಭಗವಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಧಿತರನ್ನು ತಮಿಳುನಾಡು ಮೂಲದ ಕಾರ್ತಿಕ್ (38 ), ನರಸಿಂಹನ್ (40 ), ಹಾಸನ ಮೂಲದ ಯಧು ಕುಮಾರ್ (33 ), ದೀಕ್ಷಿತ್ (26 ) ಎಂದು ಗುರುತಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಐದು ಮೊಬೈಲ್, ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದ್ದು ಉಳಿದ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಮಾ ೨೦ರಂದು ಸಂಪಾಜೆಯ ಚಟ್ಟೆಕಲ್ಲಿನ ಅಂಬಾಶ್ರಮದ ನಿವಾಸಿ ಜ್ಯೋತಿಷಿ, ಅರ್ಚಕ ಅಂಬರೀಶ್ ಭಟ್ ಅವರ ಮನೆಯಿಂದ 1,50,000 ರು. ನಗದು ಹಾಗೂ 100 ಗ್ರಾಂ ಚಿನ್ನವನ್ನು ಎಳನೀರು ಕೊಚ್ಚುವ ಮಚ್ಚು ತೋರಿಸಿ ಬೆದರಿಸಿ ಕದ್ದೊಯ್ದಿದ್ದರು.


















