ಚಾರ್ಮಾಡಿ: ಮಳೆಯ ಕಾರಣದಿಂದ ಗುಡ್ಡ ಕುಸಿತದ ಭೀತಿ ಎದುರಾಗುತ್ತಿದ್ದ ಚಾರ್ಮಾಡಿ ಘಾಟ್ ನಲ್ಲಿ ಇದೀಗ ರಾತ್ರಿ ಸಂಚಾರಕ್ಕೆ ಅನುಮತಿ ಸಿಕ್ಕಿದೆ. ರಾತ್ರಿ ಸಮಯದಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ನೀಡಿದೆ. ಇದರಿಂದಾಗಿ ದಿನದ 24 ಗಂಟೆ ಚಾರ್ಮಾಡಿ ಮೂಲಕ ಟೆಂಪೋ ಟ್ರಾವೆಲ್ಲರ್, ಆಂಬ್ಯುಲೆನ್ಸ್, ಕಾರು, ಜೀಪು, ವ್ಯಾನ್ ಹಾಗೂ ದ್ವಿಚಕ್ರ ವಾಹನಗಳು ಸಂಚಾರ ನಡೆಸಬಹುದಾಗಿದೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ ಹೊರಡಿಸಿದ್ದಾರೆ. ಉಳಿದಂತೆ ಕೆಎಸ್ಆರ್ ಟಿಸಿ ಬಸ್, 6 ಚಕ್ರದ ಲಾರಿಗಳ ಸಂಚಾರಕ್ಕೆ ಬೆಳಗ್ಗೆ 6 ರಿಂದ ಸಂಜೆ 7 ರವರೆಗೆ ಮಾತ್ರ ಸದ್ಯ ಅವಕಾಶವಿದೆ. ರಾತ್ರಿ ವೇಳೆಯಲ್ಲಿ ಇವುಗಳ ಸಂಚಾರ ನಿರ್ಬಂಧಿಸಲಾಗಿದೆ. ಇನ್ನು ಘನ ವಾಹನಗಳ ಸಂಚಾರವನ್ನು ಸದ್ಯ ಸಂಪೂರ್ಣವಾಗಿ ನಿಷೇಧಿಸಲಾಗಿದೆ.










