ನ್ಯೂಸ್ ನಾಟೌಟ್: ಟೆನಿಸ್ ಬಾಲ್, ಲೆದರ್ಬಾಲ್ ಯಾವುದೇ ಆಗಿರಲಿ ಅದಕ್ಕೆ ತಕ್ಕುದಾಗಿ ಮಾರ್ಪಡಿಸಿದ ಕ್ರಿಕೆಟ್ ಬ್ಯಾಟ್ನಲ್ಲಿ ಬ್ಯಾಟ್ಸ್ಮನ್ಗಳು ಬಂದು ಕ್ರಿಕೆಟ್ ಆಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ತೆಂಗಿನ ಗರಿಗೆ ಆಧಾರವಾಗಿರುವ ಕೊತ್ತಲಿಗೆಯನ್ನೇ ಬ್ಯಾಟ್ ಮಾಡಿಕೊಂಡು ಕ್ರಿಕೆಟ್ ಕೂಟವನ್ನು ಆಯೋಜಿಸಿರುವ ಅಪರೂಪದ ಪ್ರಸಂಗ ನಡೆದಿದೆ.
ಇವರದ್ದು ಎಲ್ಲರ ಕ್ರಿಕೆಟ್ನಂತಲ್ಲ. ಸ್ವಲ್ಪ ತಮಾಷೆಯಾಗಿದ್ದರೂ ದೊಡ್ಡ ಮನೋರಂಜನೆಯ ಕ್ರಿಕೆಟ್ ಕೂಟ. ಬಾಲ್ಯದಲ್ಲಿ ನಾವು ನೀವು ಆಡಿದ ತೆಂಗಿನ ಗರಿಯ ಕೊತ್ತಲಿಗೆ ಕ್ರಿಕೆಟ್ ನೆನಪನ್ನು ಪುನರಾವರ್ತಿಸುವುದು ಇವರ ಉದ್ದೇಶ. ಬಾಲ್ಯದ ನಿಮ್ಮ ನೆನಪುಗಳನ್ನು ಮತ್ತೆ ಸ್ಮರಣೀಯವಾಗಿಸುವುದಕ್ಕೆ ಇದೊಂದು ಸದಾವಕಾಶ. ಇಂತಹದ್ದೊಂದು ಅಪರೂಪದ ಕ್ರಿಕೆಟ್ ಅನ್ನು ಆಯೋಜಿಸಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಅನ್ನುವುದು ವಿಶೇಷ. ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಬೆಳ್ತಂಗಡಿ ತಾಲೂಕು ಮಟ್ಟದ ಕೊತ್ತಲಿಗೆ ಕ್ರಿಕೆಟ್ ಕೂಟವನ್ನು ಜೂನಿಯರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕೂಟದ ಟ್ರೋಫಿಗೆ ರಾಜಕೇಸರಿ ಟ್ರೋಫಿ ಎಂದು ಹೆಸರಿಸಲಾಗಿದೆ. ಈ ಬಗ್ಗೆ ನ್ಯೂಸ್ ನಾಟೌಟ್ ಜತೆಗೆ ಮಾತನಾಡಿದ ಸಂಘಟಕ ದೀಪಕ್ ಜಿ. ಅವರು, “ನಮಗೆ ನಮ್ಮ ಬಾಲ್ಯದ ದಿನಗಳು ಕಳೆದು ಹೋಗಿವೆ. ನಮ್ಮ ಅಮೂಲ್ಯ ಕ್ಷಣಗಳನ್ನು ಕೊತ್ತಲಿಗೆ ಬ್ಯಾಟ್ ನಲ್ಲಿ ಆಡಿ ಕಳೆದಿದ್ದೇವೆ. ಆ ಸುಂದರ ನೆನಪು ನಮ್ಮ ಜೀವನದಲ್ಲಿ ಎಂದಿಗೂ ಮರೆಯಬಾರದು, ಹೀಗಾಗಿ ಕೊತ್ತಲಿಗೆ ಕ್ರಿಕೆಟ್ ಕೂಟವನ್ನು ಆಯೋಜಿಸಿದ್ದೇವೆ’ ಎಂದು ತಿಳಿಸಿದರು.
ದಿನಾಂಕ ೧೨-೦೨-೨೦೨೩ರಂದು ನಡೆಯಲಿರುವ ಕ್ರಿಕೆಟ್ ಕೂಟದಲ್ಲಿ ಕೊತ್ತಲಿಗೆ ಬ್ಯಾಟ್ ಗೆ ಮಾತ್ರ ಅವಕಾಶ, ಬೇರೆ ಬ್ಯಾಟ್ ತರುವುದಕ್ಕೆ ಅವಕಾಶ ಇರುವುದಿಲ್ಲ. ನಿಗದಿತ ಸಮಯದ ಒಳಗೆ ಹೆಸರು ಕೊಟ್ಟ ೨೫ ತಂಡಗಳಿಗೆ ಮಾತ್ರ ಅವಕಾಶ, ಪಂದ್ಯವು ನಿಗದಿತ ಓವರ್ಗೆ ಸೀಮಿತವಾಗಿರುತ್ತದೆ. ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ. ಉತ್ತಮ ಹೊಡೆತಗಾರ, ಎಸೆತಗಾರ ಸರಣೀ ಶ್ರೇಷ್ಠ ಪ್ರಶಸ್ತಿ ನೀಡಲಾಗುತ್ತದೆ. ಟೂಗೊಂಡರೆ ಟಾಸ್ ಹಾಕುವುದರ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ತಂಡಕ್ಕೆ ಪ್ರವೇಶ ಶುಲ್ಕ ರೂ.೩೦೦ ನಿಗದಿಪಡಿಸಲಾಗಿದೆ.


















