ನ್ಯೂಸ್ ನಾಟೌಟ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಸ್ಲಿಂ ವಿರೋಧಿ ಎಂದೇ ಕೆಲವರು ಜರೆಯುತ್ತಾರೆ. ಆದರೆ ಮುಸ್ಲಿಮರಲ್ಲೂ ಅನೇಕ ಮಂದಿ ಯೋಗಿ ಆದಿತ್ಯನಾಥ್ ಅವರ ಅಭಿಮಾನಿಗಳಿದ್ದಾರೆ ಅನ್ನುವುದು ಸಾಬೀತಾಗಿದೆ. ಉತ್ತರ ಪ್ರದೇಶದ ಮುಸ್ಲಿಂ ಯುವಕನೊಬ್ಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರವನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನ ತೋರಿಸಿದ್ದಾನೆ.
೨೩ ವರ್ಷ ವಯಸ್ಸಿನ ಯಮೀನ್ ಸಿದ್ದಿಖಿ ತನ್ನ ಎದೆಯ ಮೇಲೆ ಯೋಗಿ ಆದಿತ್ಯನಾಥ್ ಅವರ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾನೆ. ಯೋಗಿ ತನ್ನ ಮಾದರಿ ವ್ಯಕ್ತಿ ಎಂದು ಆತ ಹೇಳಿದ್ದಾನೆ. ಉತ್ತರ ಪ್ರದೇಶದ ಮೈನ್ಪುರಿ ಮತ್ತು ಫರುಖಾಬಾದ್ ಜಿಲ್ಲೆಗಳ ಗಡಿ ಭಾಗದ ಹಳ್ಳಿಯಲ್ಲಿ ಸಿದ್ದಿಖಿ ವಾಸಿಸುತ್ತಿದ್ದು, ಪಾದರಕ್ಷೆಗಳ ವ್ಯಾಪಾರ ನಡೆಸುತ್ತಿದ್ದಾನೆ. ಯೋಗಿ ಅವರ ಹಚ್ಚೆ ಹಾಕಿಸಿಕೊಂಡಾಗಿನಿಂದ ಸ್ನೇಹಿತರು ಮತ್ತು ಸಂಬಂಧಿಕರಿಂದ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದ್ದರೂ ಆ ಬಗ್ಗೆ ತಲೆ ಕಡೆಸಿಕೊಂಡಿಲ್ಲ ಎಂದು ಸಿದ್ದಿಖಿ ಹೇಳಿರುವುದಾಗಿ ವರದಿಯಾಗಿದೆ. ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ, ಅವರಿಗೆ ಹಚ್ಚೆ ತೋರಿಸುವ ಆಸೆಯಿದೆ. ಅವರ ಮೇಲೆ ಅಪಾರ ಪ್ರೀತಿ ಮತ್ತು ಗೌರವವಿದೆ. ಅವರು ಅಧಿಕಾರಕ್ಕೆ ಬಂದಾಗಿನಿಂದ ಉತ್ತರ ಪ್ರದೇಶದಲ್ಲಿ ಬದಲಾವಣೆ ತಂದಿದ್ದಾರೆ. ಹಿಂದೂ ಮತ್ತು ಮುಸ್ಲಿಮರು ಎಲ್ಲರೂ ಎಲ್ಲ ಕಲ್ಯಾಣ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ, ಅದರಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ಸಿದ್ದಿಖಿ ಹೇಳಿದ್ದಾನೆ.


















