ಮೈಸೂರು: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರೊಫೆಸರ್ ಆಗಿದ್ದ ಪ್ರೊ ಶಿವಣ್ಣ ನೆಲಮನೆಯವರು ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ತೀವ್ರ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಮಂಗಳವಾರ ತಡ ರಾತ್ರಿ 12.45 ರ ವೇಳೆ ಹೃದಯಾಘಾತವಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 31 ವರ್ಷಗಳ ಕಾಲ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಶಿವಣ್ಣ ಅವರು ಸೇವೆ ಸಲ್ಲಿಸಿದ್ದರು. ಮೃತರ ಪತ್ನಿ ಸುಮಂಗಲ ಕೂಡ ಅದೇ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ಮೃತರು ಇಬ್ಬರು ಪುತ್ರರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರೊ.ಶಿವಣ್ಣ ಹೆಚ್ಚು ಚಟುವಟಿಕೆಯಿಂದ ಇದ್ದರು. ತನ್ನ ವಿದ್ಯಾರ್ಥಿಗಳ ಜತೆಗಿನ ನಿರಂತರ ಒಡನಾಟದಲ್ಲಿದ್ದರು.
ಒಳ್ಳೆಯ ವಿಮರ್ಷಕರಾಗಿದ್ದರು: ಪ್ರಭಾಕರ ಶಿಶಿಲ
ಪ್ರೊ ಶಿವಣ್ಣ ಅವರು ಸೌಮ್ಯ ಸ್ವಭಾವದವರು. ಯಾರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ. ತಾನಾಯಿತು ತನ್ನ ಕೆಲಸ ಆಯಿತೆಂದು ಇರುತ್ತಿದ್ದರು. ಅವರೊಬ್ಬ ಒಳ್ಳೆಯ ವಿಮರ್ಷಕ. ನನ್ನ ನಾಲ್ಕೈದು ಕೃತಿಗಳಿಗೆ ಮುನ್ನಡಿಯನ್ನು ಸೊಗಸಾಗಿ ಬರೆದಿದ್ದಾರೆ. ಆದರೆ ತನ್ನ ಪ್ರತಿಭೆಯನ್ನು ಪ್ರದರ್ಶಿಸುವುದಕ್ಕೆ ಅವರು ಎಂದೂ ಹೋಗಲೇ ಇಲ್ಲ. ಅವರು ವಿಮರ್ಷೆ ಬರೆಯದೇ ಇರುವುದು ಕನ್ನಡ ವಿಮರ್ಷಾ ಲೋಕಕ್ಕೆ ಆದ ದೊಡ್ಡ ನಷ್ಟ ಎಂದು ಖ್ಯಾತ ಅರ್ಥಶಾಸ್ತ್ರಜ್ಞ, ಲೇಖಕ ಡಾ. ಪ್ರಭಾಕರ ಶಿಶಿಲ ನ್ಯೂಸ್ ನಾಟೌಟ್ ಗೆ ತಿಳಿಸಿದರು.
ದುಃಖ ಭರಿಸುವ ಶಕ್ತಿ ಕೊಡಲಿ: ದಾಮ್ಲೆ
ಶಿವಣ್ಣ ಅವರ ಜತೆಗೆ ಹಲವಾರು ವರ್ಷ ಇದ್ದು ಕೆಲಸ ಮಾಡಿದ್ದೇನೆ, ಅವರು ಸದಾ ಹಸನ್ಮುಖಿಯಾಗಿ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಕನ್ನಡ ಸಾಹಿತ್ಯದ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು. ಅವರಿಲ್ಲ ಅನ್ನುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಚಂದ್ರಶೇಖರ ದಾಮ್ಲೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದರು.
ನಡೆದಾಡುವ ಶಬ್ದ ಮಣಿ ದರ್ಪಣ: ಪೂವಪ್ಪ ಕಣಿಯೂರು
ಶಿವಣ್ಣ ಅವರು ಹೆಚ್ಚು ಕ್ರೀಯಾಶೀಲರಾಗಿದ್ದರು. ಕನ್ನಡ ವ್ಯಾಕರಣ, ಛಂದಸ್ಸು, ಕಾವ್ಯಾಮೀಮಾಂಸೆ ಇವೆಲ್ಲದರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು. ನಡೆದಾಡುವ ಶಬ್ದ ಮಣಿದರ್ಪಣ ಎಂದೇ ಅವರನ್ನು ಕರೆಯಬಹುದು ಎಂದು ಸಹದ್ಯೋಗಿಯಾಗಿ ಕೆಲಸ ಮಾಡಿದ್ದ ನಿವೃತ್ತ ಉಪನ್ಯಾಸಕಾರದ ಪೂವಪ್ಪ ಕಣಿಯೂರು ನ್ಯೂಸ್ ನಾಟೌಟ್ ಜತೆಗಿನ ಮಾತಲ್ಲಿ ನೆನಪಿಸಿಕೊಂಡರು.


















