ನ್ಯೂಸ್ ನಾಟೌಟ್: ಸಂಪಾಜೆ ಹಾಗೂ ಚೆಂಬು ಗ್ರಾಮದ ಸುತ್ತಮುತ್ತಲೂ ಕಂಪನದ ಅನುಭವದ ಹಿನ್ನಲೆಯಲ್ಲಿ ಜನರು ಆತಂಕ್ಕೆ ಒಳಗಾಗಿದ್ದಾರೆ.
ಜಿಲ್ಲೆಗೆ ಮತ್ತೆ ಅನಾಹುತ ಕಾದಿದೆಯೇ ಅನ್ನುವಂತಹ ಭೀತಿ ಎದುರಾಗಿದೆ. ಭೂ ಕಂಪದ ಕೇಂದ್ರ ಬಿಂದುವಾಗಿರುವ ಚೆಂಬು ಗ್ರಾಮದ ಜನತೆ ಈಗ ಹೆಚ್ಚು ಭಯ ಭೀತರಾಗಿದ್ದಾರೆ. ಮಂಗಳವಾರ ಬೆಳಗ್ಗೆ ಹಾಗೂ ಸಂಜೆ ಸತತ ಎರಡು ಸಲ ಭೂಕಂಪವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಚೆಂಬು ಗ್ರಾಮಕ್ಕೆ ಭೇಟಿ ನೀಡಿದ ವಿಪತ್ತು ನಿರ್ವಹಣಾ ತಂಡ ಪರಿಶೀಲನೆ ನಡೆಸಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅನನ್ಯ ವಾಸುದೇವ್ ಅವರ ತಂಡವು ಯಾವುದೇ ಅಪಾಯದ ಮುನ್ಸೂಚನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.


















