ಕುಪ್ಪೆಪದವು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಾಗ್ಗೆ ವಿನೂತನ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಸ್ವಚ್ಛ ಭಾರತ್ ಕಲ್ಪನೆಯ ಬಗ್ಗೆ ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಎಷ್ಟು ಉದ್ದದ ಬುದ್ಧಿ ಮಾತು ಹೇಳಿದರೂ ನಮ್ಮ ಜನ ಕೇಳುವುದೇ ಇಲ್ಲ. ಬಹುತೇಕ ವಿದ್ಯಾವಂತರೇ ಎಲ್ಲೆಂದರಲ್ಲಿ ಕಸವನ್ನು ಹಾಕಿ ಅಶಿಸ್ತಿನ ಜೀವನ ನಡೆಸುತ್ತಿರುವುದು ವಿಪರ್ಯಾಸವೇ ಸರಿ. ಇಂತಹ ಕಿಡಿಗೇಡಿಗಳಿಗೆ ಸರಿಯಾಗಿ ಪಾಠ ಕಲಿಸುವುದಕ್ಕಾಗಿ ಇಲ್ಲೊಂದು ಗ್ರಾಮ ಪಂಚಾಯತ್ ಸಜ್ಜಾಗಿ ನಿಂತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಪ್ಪೆ ಪದವು ಗ್ರಾಮ ಪಂಚಾಯತ್ ಹೊಸದಾಗಿ ಒಂದು ಪ್ರಕಟಣೆ ಹೊರಡಿಸಿದೆ. ಈ ಪ್ರಕಾರವಾಗಿ ರಸ್ತೆ ಬದಿ ಮತ್ತು ಉದ್ಯಾನವನಗಳಲ್ಲಿ ಯಾರು ಕಸ ಹಾಕುತ್ತಾರೋ ಅಂತಹ ಕಿಡಿಗೇಡಿಗಳ ಛಾಯ ಚಿತ್ರಗಳನ್ನು ತೆಗೆದು ಕಳಿಸಿದರೆ ಅವರಿಗೆ ರೂ.500 ನಗದು ನೀಡಲು ತೀರ್ಮಾನಿಸಿದೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡುವುದಾಗಿಯೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ಬೀಳುವುದಕ್ಕೆ ಕಡಿವಾಣ ಬೀಳಬಹುದು ಅನ್ನುವುದು ಪಂಚಾಯತ್ ಆಡಳಿತ ವಿಭಾಗದ ನಂಬಿಕೆಯಾಗಿದೆ. ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಲಿದೆ ಅನ್ನುವುದನ್ನು ಕಾದು ನೋಡಬೇಕಿದೆ.


















