ನ್ಯೂಸ್ ನಾಟೌಟ್ : ಮಂಗಳೂರಿನಲ್ಲಿ ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳನ್ನು ಒಳಗೊಂಡ ಡ್ರಗ್ಸ್ ಮಾಫಿಯಾವನ್ನು ಬಯಲಿಗೆಳೆದ ಪೊಲೀಸರು ಮತ್ತೆರಡು ಪ್ರಕರಣವನ್ನು ಬಯಲಿಗೆ ಎಳೆದಿದ್ದಾರೆ.ಪ್ರತ್ಯೇಕ ಪ್ರಕರಣದಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಮತ್ತು ಚರಸ್ ಪೂರೈಸುತ್ತಿದ್ದ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚರಸ್ ಮತ್ತು ಗಾಂಜಾ ಕೇಸ್ ಪತ್ತೆ

ಮಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಪೂರೈಸುತ್ತಿದ್ದ ಗ್ಯಾಂಗ್ಒಂ ದನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳದ ಸುಕೇತ್ ಕಾವ (33), ತಮಿಳುನಾಡಿನ ಅರವಿಂದ(24), ಉಡುಪಿಯ ಸುನೀಲ್ 32) ಬಂಧಿತರು.ಉತ್ತರ ಭಾರತದ ಹಿಮಾಚಲ ಪ್ರದೇಶ ರಾಜ್ಯದ ಕುಲು ಜಿಲ್ಲೆಯ ಪಾರ್ವತಿ ವ್ಯಾಲಿ ಎಂಬ ಹೆಸರಿನ ಸುಮಾರು 300ಕ್ಕಿಂತ ಹೆಚ್ಚು ಹಳ್ಳಿಗಳಿರುವ ಗುಡ್ಡಗಾಡು ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಗಾಂಜಾ ಮತ್ತು ಅದರಿಂದ ತಯಾರಿಸುತ್ತಿದ್ದ ಚರಸ್ ಅನ್ನು ಕಾರ್ಕಳದ ಬಜಗೋಳಿ ಮೂಲದ ಸುಕೇತ್ ಕಾವ ಎಂಬಾತ ತಾನು ಪ್ರವಾಸಿಗಳ ಟೂರ್ ಗೈಡರ್ ಎಂದು ಹೇಳಿಕೊಂಡು ಅಲ್ಲಿನ ಗುಡ್ಡಗಾಡುಜನರಿಂದ ಸಂಗ್ರಹಿಸಿ, ಮಂಗಳೂರಿಗೆ ಪೂರೈಕೆ ಮಾಡುತ್ತಿದ್ದ. ಈತನ ಜೊತೆಗೆ ತಮಿಳುನಾಡು ಕೊಯಂಬತ್ತೂರು ಮೂಲದ ಅರವಿಂದ ಮತ್ತು ಕಾರ್ಕಳದ ಸುನಿಲ್ಎಂಬವರು ಸಹಕರಿಸಿದ್ದು ಹಿಮಾಚಲದಲ್ಲಿ ತಾವು ಪ್ರವಾಸಿಗರೆಂಬ ಸೋಗಿನಲ್ಲಿ ಗಾಂಜಾ ಮತ್ತು ಚರಸ್ ಅನ್ನು ಗುಡ್ಡಗಾಡು ಜನರಿಂದ ಸಂಗ್ರಹಿಸುತ್ತಿದ್ದರು.ಸುಕೇತ್ ಕಾವ ಹಿಮಾಚಲದಲ್ಲಿ ಟೂರ್ ಗೈಡ್ ಆಗಿದ್ದರೆ, ಅರವಿಂದ ಕಾಸ್ಟಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ. ಮಂಗಳೂರಿನ ಸೆನ್ ಕ್ರೈಂ ಠಾಣೆಯ ಪೊಲೀಸರು ಆರೋಪಿಗಳಿಂದ 500 ಗ್ರಾಮ್ ಚರಸ್ ಮತ್ತು ಒಂದು ಕೆಜಿ ತೂಕದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.ಅಲ್ಲದೆ, ಇವರು ಸಾಗಾಟಕ್ಕೆ ಬಳಸಿದ್ದ ರಿಡ್ಜ್ ಕಾರು ಮತ್ತು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು ಎಂಟು ಲಕ್ಷ ಮೌಲ್ಯದ ಸೊತ್ತನ್ನು ಸ್ವಾಧೀನ ಪಡಿಸಲಾಗಿದೆ.
ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ:

ಮಂಗಳೂರಿನ ಕುಂಟಿಕಾನ ಬಳಿ ಸ್ವಿಫ್ ಡಿಸೈರ್ ಕಾರನ್ನು ತಡೆ ಹಿಡಿದ ಪೊಲೀಸರು ಅದರಲ್ಲಿ 10 ಕೆಜಿ ಗಾಂಜಾ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ವಿಜಯ ಕುಮಾರ್ ಶೆಟ್ಟಿ(24) ಎಂಬಾತ ಬಂಧಿತನಾದವನು. ಆಂಧ್ರ ಪ್ರದೇಶದಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಸಾಗಿಸುತ್ತಿದ್ದ ವೇಳೆ ಈತನ ಬಂಧನವಾಗಿದೆ. ಆತನಿಂದ ಸ್ಟಿಫ್ ಕಾರು, ಮೊಬೈಲ್ ಫೋನ್ ಮತ್ತು 565 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಪೊಲೀಸರು ಆತನನ್ನು ಬಂಧಿಸಿ ಉರ್ವಾ ಠಾಣೆಗೆ ಹಸ್ತಾಂತರ ಮಾಡಲಾಗಿದೆ. ವಿಜಯ ಕುಮಾರ್ ಶೆಟ್ಟಿ ಈ ಹಿಂದೆಯೂ ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಗಾಂಜಾ ಕೇಸ್ನಲ್ಲಿ ಅರೆಸ್ಟ್ ಆಗಿದ್ದ.


















