ಉಡುಪಿ: ರಾಜೋತ್ಸವ ಪ್ರಶಸ್ತಿ ಪುರಸ್ಕೃತ , ಶತಾಯುಷಿ ಗುರುವ ಕೊರಗ 105 ವರ್ಷ ಆದಿತ್ಯವಾರ ನಿಧನರಾಗಿದ್ದಾರೆ. ಹಿರಿಯಡ್ಕ,ಗುಡ್ಡೆ ಅಂಗಡಿ ಬಲ್ಕೋಡಿ ನಿವಾಸಿಯಾಗಿದ್ದ ಇವರು ಡೋಲು ಕಲಾವಿದ ತೋಮ ಮತ್ತು ತುಂಬೆ ದಂಪತಿಯ ಪುತ್ರ. ಡೋಲು ನುಡಿಸುವುದರ ಮೂಲಕ ಜನಪದ ಸಂಸ್ಕೃತಿಯ ಸೊಗಡನ್ನು ಇಡೀ ನಾಡಿಗೆ ಪರಿಚಯಿಸಿದ್ದ ಹಿರಿಮೆ ಇವರದು. ಕೊರಗ ಬುಡಕಟ್ಟು ಸಮುದಾಯದ ಗುರುವ ಕೊರಗ ಡೋಲು ಕಲೆಯಲ್ಲಿ ಪ್ರಖ್ಯಾತಿ ಗಳಿಸಿ ಈ ಮೂಲಕ ಸಮುದಾಯಕ್ಕೆ ಪ್ರಪ್ರಥಮ ರಾಜೋತ್ಸವ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳಲು ಕಾರಣಕರ್ತರಾದರು. ಜಾನಪದೀಯ ಸಂಸ್ಕೃತಿ ಅತೀವವಾಗಿ ನೆಲೆಯೂರಿರುವ ತುಳುನಾಡಿನ ಕೀರ್ತಿ ಪತಾಕೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಮೂಲಕ ತುಳುನಾಡಿಗೆ ಹಾಗೂ ಕೊರಗ ಸಮುದಾಯಕ್ಕೆ ಕೀರ್ತಿ ತಂದಿದ್ದರು.










