ನ್ಯೂಸ್ ನಾಟೌಟ್:ಉಂಡ ಮನೆಗೆ ದ್ರೋಹ ಬಗೆದಂತೆ, ಕೆಲಸಕ್ಕೆ ಬಂದಿದ್ದ ಕಾರ್ಮಿಕರೇ ಮನೆಯೊಡತಿಯಯನ್ನುಹತ್ಯೆಗೈಯಲು ಯತ್ನಿಸಿದ ಘಟನೆ ಸುಳ್ಯದ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿಂದ ವರದಿಯಾಗಿದೆ.
ಕರಿಕ್ಕಳ ವಿಶ್ವನಾಥ ಮತ್ತು ಗಾಯತ್ರಿ ದಂಪತಿಗೆ ಇವರ ಮನೆಗೆ ಕೆಲಸಕ್ಕೆ ಬಂದವರೇ ಆಕ್ರಮಣ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಮನೆಯವರು ಬೊಬ್ಬೆ ಹಾಕಿದ್ದು, ಅಕ್ಕಪಕ್ಕದ ಮನೆಯವರು ಕೂಡಲೇ ಮನೆ ಕಡೆ ಧಾವಿಸಿದರು.ಸದ್ಯ ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ.ಕಾರ್ಮಿಕರಿಬ್ಬರು ನಾಲ್ಕು ತಿಂಗಳುಗಳಿಂದ ಕೃತ್ಯ ನಡೆದ ಕರಿಕ್ಕಳ ಗುರುಕೃಪ ವಿಶ್ವನಾಥ್ ಅವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆ ಸಮೀಪದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಕೃತ್ಯ ನಡೆದ ಗುರುವಾರ ಸಂಜೆ ಆರೋಪಿಗಳಿಬ್ಬರು ಪಂಜ ಪೇಟೆಗೆ ಹೋಗುವುದಾಗಿ ಹೇಳಿ 200 ರೂ. ಪಡೆದು ಹೊರ ಹೋಗಿ ವಾಪಸ್ಸು ಬಂದಿದ್ದರು. ರಾತ್ರಿ ಗಂಟೆ 9.30ರ ಸುಮಾರಿಗೆ ಏಣಿ ಹತ್ತಿ ಮನೆಯ ಮಹಡಿಗೆ ಆರೋಪಿಗಳು ಬಂದಿದ್ದು, ಅಲ್ಲಿ ಮಲಗಿದ್ದ ಮನೆ ಮಾಲಕ ವಿಶ್ವನಾಥ್ ಅವರ ಪತ್ನಿ ಗಾಯತ್ರಿ(61) ಅವರ ಕೊಲೆಗೆ ಯತ್ನಿಸಿದ್ದಾರೆ.
ಆರೋಪಿ ವರದರಾಜ್ ಗಾಯತ್ರಿಯವರು ಕುತ್ತಿಗೆಯನ್ನು ಅದುಮಿ ಹಿಡಿದು ಚಿನ್ನ ಮತ್ತು ಹಣ ಎಲ್ಲಿದೆ ಎಂದು ಕೇಳಿದ್ದು, ಮನೆಯೊಡತಿ ಇಲ್ಲ ಎಂದಾಗ ಕೊಲೆ ಮಾಡುತ್ತೇನೆ ಎಂದಿದ್ದಾರೆ. ಇನ್ನೊರ್ವ ಆರೋಪಿ ಸೈಜಾನ್ ಗಾಯತ್ರಿ ಅವರ ಎರಡೂ ಕಾಲುಗಳನ್ನೂ ಹಿಡಿದುಕೊಂಡಿದ್ದಾನೆ. ಈ ವೇಳೆ ಗಾಯತ್ರಿ ಅವರ ಬೊಬ್ಬೆ ಕೇಳಿ ಮನೆ ಸಮೀಪ ವಾಸಿಸುತ್ತಿದ್ದ ಸುರೇಶ್ ಹಾಗೂ ಪ್ರೇಮ ಎಂಬವರು ಅಲ್ಲಿಗೆ ದೌಡಯಿಸಿದ್ದಾರೆ. ಅವರಿಬ್ಬರು ಆರೋಪಿಗಳನ್ನು ಪಕ್ಕಕ್ಕೆ ತಳ್ಳಿದ್ದು, ಸುರೇಶ್ ಆರೋಪಿಗಳನ್ನು ಹಿಡಿದಿದ್ದ ವೇಳೆ ಆರೋಪಿ ವರದರಾಜ್ ಹರಿತವಾದ ಆಯುಧದಿಂದ ಗಾಯತ್ರಿ ಅವರ ಕುತ್ತಿಗೆಗೆ ಎರಡು ಕಡೆ ಹಿರಿದ ಪರಿಣಾಮ ಗಾಯವಾಗಿದೆ. ಅವರಿಗೆ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ವರದರಾಜ್ ಮತ್ತು ಸೈಫನ್ ಎಂಬುವರನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ . ಗಾಯತ್ರಿಯವರ ಕುತ್ತಿಗೆಗೆ ಇರಿದ ಗಾಯವಾಗಿದ್ದು ಅವರು ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಮಹಡಿ ಮೇಲೆ ಏರಿ ಕೃತ್ಯ ಎಸಗಿದ್ದು , ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಮನೆಯಲ್ಲಿ ಹಣವಿರುವ ವಿಚಾರ ಆರೋಪಿಗಳಿಗೆ ತಿಳಿದಿತ್ತು . ಮನೆಯವರನ್ನು ಮುಗಿಸಿ ದರೋಡೆ ನಡೆಸುವ ಆರೋಪಿಗಳು ಯೋಜನೆ ರೂಪಿಸಿದ್ದರು ಎನ್ನಲಾಗಿದೆ.ಸೈಫನ್ ಧರ್ಮಸ್ಥಳ ಹೊಸ ಬಸ್ ತಂಗುದಾಣ ಬಳಿ ನಿವಾಸಿಯಾಗಿದ್ದರೆ ವರದರಾಜ್ ಚಿತ್ರದುರ್ಗದ ಹಿರಿಯೂರು ನಿವಾಸಿಯಾಗಿದ್ದಾರೆ.


















