ಬೆಂಗಳೂರು: ಇತ್ತೀಚೆಗೆ ನಿಧನರಾದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್ ) ವಿಶೇಷ ಗೌರವ ಸಲ್ಲಿಸಿದೆ. ತನ್ನ ಜನಪ್ರಿಯ ನಂದಿನಿ ಹಾಲಿನ ಪ್ಯಾಕೆಟ್ಗಳ ಮೇಲೆ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ಕೆಎಂಎಫ್ ಮುದ್ರಿಸಿದೆ ಎಂಬ ಫೋಟೊಗಳು ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆದರೆ, ಪುನೀತ್ ಅವರ ಭಾವಚಿತ್ರವನ್ನು ಹಾಲಿನ ಪ್ಯಾಕೆಟ್ ಗಳ ಮೇಲೆ ಮುದ್ರಿಸುವ ನಿರ್ಧಾರವನ್ನು ನಾವು ತೆಗೆದುಕೊಂಡಿಲ್ಲ ಎಂದು ಕೆಎಂಎಫ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಭಾವಚಿತ್ರವಿರುವ ನಂದಿನಿ ಹಾಲಿನ ಪ್ಯಾಕೆಟ್ ಗಳ ಬಗ್ಗೆ ನಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ರೈತರಿಗೆ ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ ಕೆಎಂಎಫ್ ನ ನಂದಿನಿ ಉತ್ಪನ್ನಗಳಿಗೆ ಪುನೀತ್ ಅವರು ಸುಮಾರು 10 ವರ್ಷಗಳಿಂದ ಪ್ರಚಾರ ರಾಯಭಾರಿಯಾಗಿದ್ದರು. ಇದಕ್ಕಾಗಿ ಅವರು ಕೆಎಂಎಫ್ನಿಂದ ಯಾವುದೇ ಸಂಭಾವನೆಯನ್ನು ಪಡೆಯುತ್ತಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಂದಿನಿ ಹಾಲಿನ ಪ್ಯಾಕೆಟ್ಗಳ ಮೇಲೆ ಪುನೀತ್ ಅವರ ಚಿತ್ರ ಇರುವ ಫೋಟೊ ಹಂಚಿಕೊಂಡು ಅಭಿಮಾನಿಗಳು ಕೆಎಂಎಫ್ ಗೆ ಧನ್ಯವಾದ ಸಲ್ಲಿಸಿದ್ದರು.


















