ನವದೆಹಲಿ: ತಾಲಿಬಾನ್ ಕೈವಶ ಮಾಡಿಕೊಂಡಿದ್ದ ಆಫ್ಘಾನಿಸ್ತಾನದಿಂದ ಭಾರತದ ರಾಯಭಾರಿ ಕಚೇರಿ ಸಿಬ್ಬಂದಿ ಮರಳಿ ಭಾರತಕ್ಕೆ ಬಂದ ಕಥೆ ಎಂತಹವರ ಮೈಮನಸ್ಸನ್ನೂ ರೋಮಾಂಚನಗೊಳಿಸುತ್ತದೆ. ಜೀವ ಕೈಯಲ್ಲಿ ಹಿಡಿದುಕೊಂಡು ರಾಯಭಾರಿ ಕಚೇರಿ ಸಿಬ್ಬಂದಿ ಕಚೇರಿಯ ಒಳಗೆ ಬಂಧಿಯಾಗಿದ್ದರು. ಹೊರಗಡೆ ನೂರಾರು ಸಂಖ್ಯೆಯಲ್ಲಿ ಅತ್ಯಾಧುನಿಕ ಬಂದೂಕು ಹಿಡಿದ ಉಗ್ರರು ನಿಂತಿದ್ದರು. ಮೆಷಿನ್ ಗನ್ ಹಾಗೂ ಗ್ರನೇಡ್ ಉಡಾವಣಾ ರಾಕೆಟ್ಗಳು ಅವರ ಬಳಿ ಇದ್ದವು. ಈ ಸಂದರ್ಭದಲ್ಲಿ ತಾಲಿಬಾನಿಗಳು ನಮ್ಮ ಜೀವವನ್ನು ಬಲಿಪಡೆಯದೇ ಬಿಡುವುದೇ ಇಲ್ಲ ಎಂದು ಸಿಬ್ಬಂದಿ ಮನದಲ್ಲಿ ಅಂದುಕೊಳ್ಳುತ್ತಾ ಇದ್ದರು. ಆದರೆ ಅವರು ಪ್ರತೀಕಾರ ತೆಗೆದುಕೊಳ್ಳುವ ಉದ್ದೇಶ ಹೊಂದಿರಲಿಲ್ಲ. ಬದಲಿಗೆ ಸಹಾಯ ಯಾಚಿಸಿದ ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ತಮ್ಮ ಬೆಂಗಾವಲಿನಲ್ಲೇ ವಿಮಾನ ನಿಲ್ದಾಣದ ತನಕ ಕರೆದೊಯ್ದಿದ್ದಾರೆ. ನಂತರ ಅಲ್ಲಿಂದ ಅವರು ನಿರ್ಗಮಿಸಿದ್ದಾರೆ ಎಂದು ಭಾರತಕ್ಕೆ ಮರಳಿದವರಲ್ಲಿ ಒಬ್ಬರಾಗಿರುವ ಎಎಫ್ ಪಿ ಸುದ್ದಿ ಸಂಸ್ಥೆ ವರದಿಗಾರ ತಿಳಿಸಿದ್ದಾರೆ.










